ಮಹಿಳೆಯ ನಿಂದಿನೆ : ಬಿಜೆಪಿ ಮುಖಂಡ ಶ್ರೀಕಾಂತ್ ತ್ಯಾಗಿ ಮನೆಗೆ ಬುಲ್ಡೋಜರ್; ಬಂಧನಕ್ಕೆ ರೂ.25000 ಬಹುಮಾನ - ಉ.ಪ್ರ ಪೊಲೀಸ | JANATA NEWS
ನೊಯಿಡಾ : ಮಹಿಳೆಯನ್ನು ನಿಂದಿಸಿ ದೌರ್ಜನ್ಯ ಎಸಗಿದ ಬಿಜೆಪಿ ಮುಖಂಡ ಶ್ರೀಕಾಂತ್ ತ್ಯಾಗಿ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ಸ್ಥಾನ ಮತ್ತು ಅಧಿಕಾರದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಸ್ಥಳೀಯ ರಾಜಕಾರಣಿ ಈಗ ತಲೆಮರೆಸಿಕೊಂಡಿದ್ದಾನೆ.
ಭಾರತೀಯ ಜನತಾ ಪಕ್ಷದ(ಬಿಜೆಪಿ) ಮುಖಂಡ ಎಂದು ಹೇಳಿಕೊಂಡಿರುವ ಶ್ರೀಕಾಂತ್ ತ್ಯಾಗಿ ನೋಯ್ಡಾದ ಹೌಸಿಂಗ್ ಸೊಸೈಟಿಯೊಳಗೆ ಮಹಿಳೆಯೊಂದಿಗೆ ಜಗಳವಾಡಿದ ನಂತರ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ ಕೆಲವೇ ಗಂಟೆಗಳ ನಂತರ, ಆಗಸ್ಟ್ 8 ಸೋಮವಾರ ಬೆಳಿಗ್ಗೆ ಬುಲ್ಡೋಜರ್ಗಳು ಸ್ಥಳಕ್ಕೆ ಆಗಮಿಸಿ, ರಾಜಕಾರಣಿಯ ನಿವಾಸಕ್ಕೆ ಅಳವಡಿಸಿದ ಅಕ್ರಮ ನಿರ್ಮಾಣಗಳನ್ನು ಧ್ವಂಸಗೊಳಿಸಿದವು.
ಬಿಜೆಪಿಯ ಕಿಸಾನ್ ಮೋರ್ಚಾದ ನಾಯಕ ಎಂದು ತ್ಯಾಗಿ ಹೇಳಿಕೊಂಡರೆ, ಅವರು ಸದಸ್ಯರೂ ಕೂಡ ಅಲ್ಲ ಎಂದು ಪಕ್ಷ ನಿರಾಕರಿಸಿದೆ. ಸದ್ಯ ತಲೆಮರೆಸಿಕೊಂಡಿರುವ ತ್ಯಾಗಿಯ ಬಂಧನಕ್ಕೆ ನೋಯ್ಡಾ ಪೊಲೀಸರು 25,000 ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಶ್ರೀಕಾಂತ್ ತ್ಯಾಗಿ ಮಹಿಳೆಯೊಬ್ಬಳ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಅವರನ್ನು ಬಂಧಿಸುವಂತೆ ಬಿಜೆಪಿಯ ಮುಖಂಡರು ಕೂಡ ಒತ್ತಾಯಿಸಿದ್ದಾರೆ. ಇದು ಮಾತ್ರವಲ್ಲದೆ, ಅವರ ಕಾರನ್ನು ಯುಪಿ ಸರ್ಕಾರಿ ವಾಹನ ಎಂದು ಬರೆದು ಚಲಾಯಿಸಿದ್ದಕ್ಕಾಗಿ ಅವರ ಹೆಸರಿನಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಶ್ರೀಕಾಂತ್ ತ್ಯಾಗಿಯನ್ನು ಹಿಡಿಯಲು ಶೋಧ ನಡೆಯುತ್ತಿದೆ.
"ನಾವು ಒಟ್ಟು ಮೂರು ಕಾರುಗಳನ್ನು ವಶಪಡಿಸಿಕೊಂಡಿದ್ದೇವೆ - ಒಂದು ಟೊಯೋಟಾ ಫಾರ್ಚುನರ್, ಒಂದು ಟಾಟಾ ಸಫಾರಿ ಮತ್ತು ಒಂದು ಹೋಂಡಾ ಸಿವಿಕ್ -- ಇದು ತ್ಯಾಗಿಗೆ ಸೇರಿದೆ" ಎಂದು ನೋಯ್ಡಾ ಪೊಲೀಸ್ ಅಧಿಕಾರಿಯೊಬ್ಬರು ಐಎಎನ್ಎಸ್ಗೆ ತಿಳಿಸಿದ್ದಾರೆ.
ಆತನ ಸ್ಥಳವನ್ನು ಪತ್ತೆಹಚ್ಚಲು, ಪೊಲೀಸರು ತ್ಯಾಗಿ ಅವರ ಪತ್ನಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಬುಲ್ಡೋಜರ್ ಕಾರ್ಯಾಚರಣೆ ಬೆನ್ನಲ್ಲೇ, ಬಡಾವಣೆಯಲ್ಲಿ ನಿವಾಸಿಗಳು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಜೈಕಾರ ಘೋಷಣೆ ಮಾಡಿದ್ದಾರೆ.